ಸ್ಯಾಂಡಲ್ವುಡ್ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಮೇಲೆ ಇತ್ತೀಚಿಗೆ ಸಾಲು ಸಾಲು ಗಂಭೀರ ಆರೋಪಗಳು ಕೇಳಿಬಂದಿವೆ. ತಮ್ಮದೆ ಸಿನಿಮಾ ಸಂಜು ವೆಡ್ಸ್ ಗೀತಾ-2 ಪ್ರಮೋಷನ್ಗೆ ರಚಿತಾ ರಾಮ್ ಬರಲಿಲ್ಲ, ಇವರ ಮೇಲೆ ಕ್ರಮ ಕೈಗೊಳ್ಳಿ ಎಂದು ನಿರ್ದೇಶಕ ನಾಗಶೇಖರ್ ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದರು. ಇಂತವರನ್ನು ಚಿತ್ರರಂಗದಲ್ಲಿ ಬೆಳೆಯಲು ಅವಕಾಶ ಕೊಡಬಾರದು ಎಂದಿದ್ದರು. ಇದರ ಬೆನ್ನಲ್ಲೇ ಸಿನಿಮಾದಲ್ಲಿ ನಟಿಸುವುದಾಗಿ ಹಣ ಪಡೆದು ವಾಪಸ್ ಕೊಡಲಿಲ್ಲ ಎಂದು ನಿರ್ಮಾಪಕಿಯೊಬ್ಬರು ರಚಿತಾ ರಾಮ್ ವಿರುದ್ಧ ದೂರಿದ್ದರು. ಆ ಬಳಿಕ ರಚಿತಾ ರಾಮ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಕೂಗು ಕೂಡ ಕೇಳಿಬಂದಿದೆ.
ಈ ಎಲ್ಲಾ ವಿಚಾರಗಳ ಬಗ್ಗೆ ಕೊನೆಗೂ ರಚಿತಾ ರಾಮ್ ಮೌನ ಮುರಿದಿದ್ದಾರೆ. ತಮ್ಮ ವಿರುದ್ಧದ ಎಲ್ಲಾ ಆರೋಪಗಳಿಗೂ ಸ್ಪಷ್ಟನೆ ಕೊಟ್ಟಿರುವ ಅವರು, ಎಲ್ಲಾ ಆರೋಪಗಳು ಸುಳ್ಳು ಎಂದು ಸಂಜು ವೆಡ್ಸ್ ಗೀತಾ-2 ತಂಡದ ಆರೋಪಕ್ಕೆ ಖಡಕ್ ತಿರುಗೇಟು ನೀಡಿದ್ದಾರೆ.

ನಾನು ಸಂಜು ವೆಡ್ಸ್ ಗೀತಾ-2ಗೆ ಎಲ್ಲಾ ರೀತಿಯ ಸಪೋರ್ಟ್ ಮಾಡಿದ್ದೇನೆ. ಮೊದಲ ಬಾರಿ ರಿಲೀಸ್ ಆದಾಗ ಎಲ್ಲಾ ಕಾರ್ಯಕ್ರಮಗಳಿಗೂ ಅಟೆಂಡ್ ಮಾಡಿದ್ದೇನೆ. ಎಲ್ಲಾ ಮಾಧ್ಯಮಗಳ ಎದುರು ಆಗೆಲ್ಲಾ ನನ್ನ ಹೊಗಳಿದ್ದಾರೆ. ರಚಿತಾ ರಾಮ್ ಅಂದ್ರೆ ಸಪೋರ್ಟಿವ್ ಅಂತೆಲ್ಲಾ ಮಾತಾಡಿದ್ದಾರೆ. ಈಗ ಯಾಕೆ ನನ್ನ ಅನುಪಸ್ಥಿತಿಯಲ್ಲಿ ಆ ರೀತಿ ಮಾತಾಡ್ತಿದ್ದಾರೋ ಗೊತ್ತಿಲ್ಲ.

ಇದೇ ಸಂಜು ವೆಡ್ಸ್ ಗೀತಾ ಟೀಮ್ ಅವರು ಶೂಟಿಂಗ್ ಕಾರಣವೊಡ್ಡಿ, ಬೇರೊಂದು ಸಿನಿಮಾ ಪ್ರಮೋಷನ್ ಗೆ ಅವಕಾಶ ಮಾಡಿಕೊಡಲಿಲ್ಲ. ಅವರರೂ ದುಡ್ಡು ಹಾಕಿರ್ಲಿಲ್ವಾ? ಅವಾಗ ಇನ್ನೊಬ್ಬರು ನಿರ್ಮಾಪಕರಿಗೆ ಕಷ್ಟ ಆಗ್ಲಿಲ್ವಾ? ಎಂದು ಪ್ರಶ್ನಿಸಿದ್ದಾರೆ.
ಸರಿಯಾದ ಪ್ಲ್ಯಾನಿಂಗ್ ಇರಲಿಲ್ಲ. ಒಂದೊಂದು ದಿನ ಒಂದೊಂದು ಶೆಡ್ಯೂಲ್ ಹೇಳ್ತಾ ಇದ್ರು. ಇವತ್ತು ಕಾರ್ಯಕ್ರಮ ಅಂತೇಳಿ ಕೊನೆ ಕ್ಷಣದಲ್ಲಿ ಮುಂದೂಡ್ತಾ ಇದ್ರು. ಹೀಗಾಗಿ ನಾನು ಎರಡನೇ ಬಾರಿ ರಿಲೀಸ್ ಪ್ರಚಾರದಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಇದೆಲ್ಲಾ ನನ್ನ ಮೇಲೆ ಬೇಕಂತಲೇ ಮಾಡಿರೋ ಆರೋಪ ಎಂದು ರಚಿತಾ ರಾಮ್ ಗುಡುಗಿದ್ದಾರೆ.
ಹಾಗೆಯೇ ನಾನು ತಪ್ಪು ಅಂತ ಮಾಡಿದ್ರೆ ಚಿಕ್ಕ ಮಕ್ಕಳಿಗೂ ಕಾಲಿಗೆ ಬಿದ್ದು ಕ್ಷಮೆ ಕೇಳ್ತೀನಿ. ಆದ್ರೆ ನನ್ನ ಕಡೆಯಿಂದ ಯಾವುದೇ ತಪ್ಪು ಆಗಿಲ್ಲ ಅಂದರೆ ದೇವರು ಬಂದರೂ ನಾನು ಸಾರಿ ಕೇಳಲ್ಲ. ನನ್ನಿಂದ ನನ್ನ ಅಭಿಮಾನಗಳಿಗೆ ಹರ್ಟ್ ಆಗಿದ್ರೆ, ಅವ್ರಿಗೆ ಮಾತ್ರ ನಾನ್ ಸಾರಿ ಕೇಳ್ತಾ ಎಂದು ರಚಿತಾ ರಾಮ್ ಹೇಳಿದ್ದಾರೆ.
ಹಾಗೆ ಇನ್ನೊಂದು ಸಿನಿಮಾದ ಅಡ್ವಾನ್ಸ್ ಪಡೆದು ವಾಪಸ್ ಮಾಡಿಲ್ಲ ಅನ್ನೋ ವಿಚಾರ ಸಾರಾ ಗೋವಿಂದು ನೇತೃತ್ವದಲ್ಲಿ ಮಾತುಕತೆಯಲ್ಲಿದೆ. ನಾನು ಆ ಬಗ್ಗೆ ಏನನ್ನು ಮಾತನಾಡುವಂತಿಲ್ಲ ಎಂದು ಎಲ್ಲಾ ಆರೋಪಗಳಿಗೂ ರಚಿತಾ ರಾಮ್ ಕ್ಲಾರಿಟಿ ಕೊಟ್ಟಿದ್ದಾರೆ.
ಇದನ್ನೂ ಓದಿ : ಸಿಎಂ ತವರಿನಲ್ಲಿ ಅಮಾನವೀಯ ಕೃತ್ಯ – ಸಾಲ ಕಟ್ಟಿಲ್ಲ ಎಂದು 7 ವರ್ಷದ ಬಾಲಕಿಯನ್ನು ಕರೆದೊಯ್ದ ಮೈಕ್ರೋ ಫೈನಾನ್ಸ್ ಸಿಬ್ಬಂದಿ!







