ಜೀ ಕನ್ನಡದಲ್ಲಿ ‘ಕರ್ಣ’ ಧಾರಾವಾಹಿ ಪ್ರಸಾರ ಕಾಣೋದು ಕನ್ಫರ್ಮ್ ಆಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಈ ಧಾರಾವಾಹಿ ನಿನ್ನೆಯಿಂದ (ಜೂನ್ 16) ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಬೇಕಿತ್ತು. ಆದ್ರೆ ಕೊನೆಯ ಘಳಿಗೆಯಲ್ಲಿ ಆದದ್ದೇ ಬೇರೆ. ‘ಕರ್ಣ’ ಧಾರಾವಾಹಿಗೆ ಬಹುದೊಡ್ಡ ಕಾನೂನು ಸಂಕಷ್ಟ ಎದುರಾಗಿದೆ.
‘ಕರ್ಣ’ ಶ್ರುತಿ ನಾಯ್ಡು ಸಂಸ್ಥೆಯಿಂದ ಮೂಡಿ ಬರ್ತಿರೋ ಬಹುನಿರೀಕ್ಷಿತ ಧಾರಾವಾಹಿಯಾಗಿದ್ದು, ಈ ಸೀರಿಯಲ್ನಲ್ಲಿ ನಟ ಕಿರಣ್ ರಾಜ್ಗೆ ನಾಯಕಿಯರಾಗಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆದ್ರೆ ಇದೀಗ ಕರ್ಣ ಸೀರಿಯಲ್ ಪ್ರಸಾರಕ್ಕೆ ಭಾರೀ ಕಂಟಕ ಎದುರಾಗಿದೆ.
ಸೀರಿಯಲ್ ಪ್ರಸಾರವಾಗದಿರಲು ನಟಿ ಭವ್ಯ ಗೌಡನೇ ಕಾರಣ? ಸೀರಿಯಲ್ ಪ್ರಸಾರವಾಗದಿರಲು ಕಾರಣ ಏನು ಎಂಬುದನ್ನು ಈವರೆಗೆ ಎಲ್ಲೂ ರಿವೀಲ್ ಆಗಿರಲಿಲ್ಲ. ಇದೀಗ ಕೇಳಿ ಬರುತ್ತಿರುವ ಹೊಸ ವರದಿಯ ಪ್ರಕಾರ ಭವ್ಯಾ ಗೌಡ ಅವರ ಕಾರಣಕ್ಕೆ ‘ಕರ್ಣ’ ಧಾರಾವಾಹಿಯ ಪ್ರಸಾರ ಮುಂದೂಡಲ್ಪಟ್ಟಿದೆ. ಹೌದು.. ಈ ಮೊದಲು ಬೇರೆ ಚಾನೆಲ್ ಜೊತೆ ಮಾಡಿಕೊಂಡ ಒಪ್ಪಂದದ ಕಾರಣಕ್ಕೆ ಭವ್ಯಾಗೆ ಇಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ.
ಭವ್ಯಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧಿಸಿ ಟಾಪ್ 6ರಲ್ಲಿ ಇದ್ದರು. ಆ ಬಳಿಕ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಭಾಗಿ ಆಗಬೇಕಿತ್ತು. ಆದರೆ, ಶೋನಲ್ಲಿ ಭವ್ಯಾ ಗೌಡ ಅವರು ಸ್ಪರ್ಧೆ ಮಾಡಲೇ ಇಲ್ಲ. ಅನಾರೋಗ್ಯದ ಕಾರಣವನ್ನು ಅವರು ನೀಡಿದರು ಮತ್ತು ಶೋನಿಂದ ಹೊರ ಬಂದಿದ್ದರು. ಆ ಬಳಿಕ ಅವರಿಗೆ ಸಿಕ್ಕ ಆಫರ್ ಜೀ ಕನ್ನಡದ ‘ಕರ್ಣ’ ಧಾರಾವಾಹಿ.
ಆದರೆ, ಭವ್ಯಾಗೆ ಈ ಮೊದಲು ಬೇರೆ ವಾಹಿನಿ ಜೊತೆ ಮಾಡಿಕೊಂಡ ಅಗ್ರಿಮೆಂಟ್ ಮುಗಿದಿರಲಿಲ್ಲ. ಈ ಕಾರಣದಿಂದ ಆ ವಾಹಿನಿಯವರು ಇದೀಗ ‘ಕರ್ಣ’ ಧಾರಾವಾಹಿಗೆ ಕೋರ್ಟ್ನಿಂದ ಸ್ಟೇ ತಂದಿದ್ದಾರೆ. ಹೀಗಾಗಿ, ತಾತ್ಕಾಲಿಕವಾಗಿ ಧಾರಾವಾಹಿ ಪ್ರಸಾರವು ಸ್ಥಗಿತಗೊಂಡಿದೆ. ಕೋರ್ಟ್ನಲ್ಲಿ ಪ್ರಕರಣ ಇತ್ಯರ್ಥವಾದ ಬಳಿಕವೇ ‘ಕರ್ಣ’ ಧಾರಾವಾಹಿಗೆ ಪ್ರಸಾರದ ಭಾಗ್ಯ ಸಿಗಲಿದೆ.
ಭವ್ಯಾ ಗೌಡಗೆ ಸಂಕಷ್ಟ : ನಟಿ ಭವ್ಯಾ ಗೌಡ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ‘ಕರ್ಣ’ ಧಾರಾವಾಹಿ ಕುರಿತ ಕೆಲ ಪೋಸ್ಟ್ಗಳನ್ನ ಈ ಮೊದಲು ಹಂಚಿಕೊಂಡಿದ್ದರು. ಆದ್ರೀಗ ‘ಕರ್ಣ’ಗೆ ಸಂಬಂಧಿಸಿದ ಪೋಸ್ಟ್ಗಳನ್ನೆಲ್ಲಾ ಭವ್ಯಾ ಗೌಡ ಡಿಲೀಟ್ ಮಾಡಿದ್ದಾರೆ. ಸದ್ಯ ಈ ಪ್ರಕರಣ ಕೋರ್ಟ್ನಲ್ಲಿದೆ. ಅಲ್ಲಿ ಇತ್ಯರ್ಥವಾದ ಬಳಿಕ ಧಾರಾವಾಹಿಯು ಪ್ರಸಾರ ಆರಂಭವಾಗಬಹುದು. ಇನ್ನು ಭವ್ಯಾ ಗೌಡ ವಿಚಾರವಾಗಿ ಕೋರ್ಟ್ನಿಂದ ಸ್ಟೇ ಬಂದ ಕಾರಣ ಅವರಿಗೆ ಸಂಬಂಧಿಸಿದ ‘ಕರ್ಣ’ ಧಾರಾವಾಹಿಯ ಪ್ರೋಮೋಗಳನ್ನ ಡಿಲೀಟ್ ಮಾಡಲಾಗಿದೆ. ಸಹಜವಾಗಿ ಇದೆಲ್ಲದರಿಂದ ಕರ್ಣ ನಿರ್ಮಾಪಕಿ ಶ್ರುತಿ ನಾಯ್ಡು ಅವರಿಗೆ ಅಪಾರವಾದ ನಷ್ಟವಾಗಿದೆ. ಶ್ರುತಿ ನಾಯ್ಡು ಅವರ ಮುಂದಿನ ನಡೆ ಏನು? ಕರ್ಣ ಈ ಕಾನೂನು ಸಮರದಲ್ಲಿ ಗೆಲ್ತಾನಾ? ಗೆದ್ದರೆ ಪ್ರಸಾರವಾಗುವುದು ಯಾವಾಗ ಎನ್ನುವುದಕ್ಕೆ ಉತ್ತರ ಶೀಘ್ರದಲ್ಲೇ ಸಿಗುವ ನಿರೀಕ್ಷೆ ಇದೆ.
ಇದನ್ನೂ ಓದಿ : ಕೊಡಗಿನಲ್ಲಿ ಮುಂದುವರಿದ ಮಳೆ ಆರ್ಭಟ – ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತ!
