ಅಯೋಧ್ಯೆ ಶ್ರೀರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್​ ನಿಧನ

ಉತ್ತರ ಪ್ರದೇಶ : ಅಯೋಧ್ಯೆಯ ರಾಮ ಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಮಹಂತ್ ಸತ್ಯೇಂದ್ರ ದಾಸ್ ಅವರು ಇಂದು(ಫೆ.11) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಂತ್ ಸತ್ಯೇಂದ್ರ ದಾಸ್ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

85 ವರ್ಷದ ಮಹಂತ್‌ ಸತ್ಯೇಂದ್ರ ದಾಸ್ ಮೆದುಳಿ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಈ ತಿಂಗಳ ಆರಂಭದಲ್ಲಿ ಅವರನ್ನು ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(SGPGI)ಗೆ ದಾಖಲಿಸಲಾಗಿತ್ತು. ಆದ್ರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಸತ್ಯೇಂದ್ರ ದಾಸ್ ಅವರು ಕೊನೆಯುಸಿರೆಳೆದಿದ್ದಾರೆ.

ಮಹಂತ್ ಸತ್ಯೇಂದ್ರ ದಾಸ್ ಅವರು ಕಳೆದ 34 ವರ್ಷಗಳಿಂದ ರಾಮಲಾಲ್ಲಾನಿಗೆ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದರು. ತಾತ್ಕಾಲಿಕ ಡೇರೆಯಿಂದ ಭವ್ಯ ದೇವಾಲಯದಲ್ಲಿ ಸಿಂಹಾಸನಾರೋಹಣ ಮಾಡುವವರೆಗೂ ಶ್ರೀರಾಮನ ಸೇವಕರಾಗಿ ಪೂಜೆ ಮುಂದುವರಿಸಿದ್ದರು.

ಇನ್ನು ಮಹಂತ್‌ ಸತ್ಯೇಂದ್ರ ದಾಸ್‌ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಅಯೋಧ್ಯೆ ರಾಮ ಮಂದಿರ ಪ್ರಧಾನ ಅರ್ಚಕರ ಸಾವಿನಿಂದ ತೀವ್ರ ದು:ಖವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಯೋಗಿ ಆದಿತ್ಯನಾಥ್‌, “ಪರಮ ರಾಮಭಕ್ತ, ಶ್ರೀ ರಾಮ ಜನ್ಮಭೂಮಿ ಮಂದಿರ, ಶ್ರೀ ಅಯೋಧ್ಯಾ ಧಾಮದ ಪ್ರಮುಖ ಅರ್ಚಕ ಸತ್ಯೇಂದ್ರ ಕುಮಾರ್ ದಾಸ್ ಮಹಾರಾಜ ಅವರ ನಿಧನನಿಂದ ತೀವ್ರ ದು:ಖಿತನಾಗಿದ್ದೇನೆ. ಈ ದು:ಖದ ಸಮಯದಲ್ಲಿ ನಾನು ಮಹಂತ್‌ ಸತ್ಯೇಂದ್ರ ದಾಸ್‌ ಅವರಿಗೆ ವಿನಮ್ರ ಶ್ರದ್ಧಾಂಜಲಿ ಸಲ್ಲಿಸುತ್ತೇನೆ..” ಎಂದು ಹೇಳಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ದೇವಾಲಯದ ಆಡಳಿತ ಮಂಡಳಿಗೆ ಸಂಬಂಧಿಸಿದ ಇತರರು ಪ್ರಧಾನ ಅರ್ಚಕರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Btv Kannada
Author: Btv Kannada

Read More

Read More