ಮನೆ ಮುಂದೆ ಗಲಾಟೆ ಮಾಡ್ಬೇಡಿ ಅಂದಿದ್ದಕ್ಕೆ ಪುಂಡರ ದಾಂಧಲೆ – ಬೈಕ್​ಗಳ ಮೇಲೆ ಕಲ್ಲು ಎತ್ತಿಹಾಕಿದ ಕಿಡಿಗೇಡಿಗಳು!

ಬೆಂಗಳೂರು : ಮನೆ ಬಳಿ ಗಲಾಟೆ ಮಾಡ್ಬೇಡಿ ಅಂದಿದ್ದಕ್ಕೆ ಪುಂಡರು ದಾಂಧಲೆ ಮಾಡಿರುವ ಘಟನೆ ನಗರದ ಬಿಳೆಕಹಳ್ಳಿ 7ನೇ ಕ್ರಾಸ್​ನಲ್ಲಿ ನಡೆದಿದೆ. ಪುಂಡರು 4 ಬೈಕ್, ಹೂವಿನ ಪಾಟ್​​ಗಳನ್ನು ಪುಡಿ ಪುಡಿ ಮಾಡಿದ್ದಾರೆ.

ನಿತಿನ್ ಎಂಬಾತನ ಗ್ಯಾಂಗ್‌ ಪ್ರತಿದಿನ ಈ ಪ್ರದೇಶಕ್ಕೆ ಬಂದು ಸಿಗರೇಟ್ ಸೇದುತ್ತಾ, ಮದ್ಯಪಾನ ಮಾಡುತ್ತಾ, ಮಧ್ಯ ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಪಟಾಕಿ ಹೊಡೆಯುತ್ತಾ ಸಾರ್ವಜನಿಕರಿಗೆ ಹಿಂಸೆ ನೀಡುತ್ತಿದ್ದರು. ಈ ಪುಂಡರ ಉಪಟಳದ ಬಗ್ಗೆ ಸ್ಥಳೀಯರು ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಈ ಘಟನೆ ನಡೆದ ಶನಿವಾರ ರಾತ್ರಿ ಕೂಡ ಈ ಗ್ಯಾಂಗ್ ರಸ್ತೆಯಲ್ಲಿ ಬೈಕ್‌ಗಳನ್ನು ಅಡ್ಡ ಹಾಕಿ ಸಮಸ್ಯೆ ಸೃಷ್ಟಿಸಿತ್ತು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಅರುಣ್ ಮನೆ ಮುಂದೆ ದಾಂಧಲೆ ಮಾಡಿದ್ದು, ಅರುಣ್ ಬೈಕ್ ಸೇರಿ ಸ್ಥಳೀಯರ ಬೈಕ್​​ಗಳ ಮೇಲೆ ಕಲ್ಲು ಎತ್ತಿಹಾಕಿದ್ದಾರೆ. ಪುಂಡರ ಅಟ್ಟಹಾಸ ಸ್ಥಳೀಯರ ಮೊಬೈಲ್ ಹಾಗೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಮೈಕೊಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ನಮ್ಮ‌ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಾಟ ಯಶಸ್ವಿ!

Btv Kannada
Author: Btv Kannada

Read More