ಬೆಂಗಳೂರು : ಕಳ್ಳತನ ಪ್ರಕರಣಗಳ ತನಿಖೆ ವೇಳೆ ಕಳ್ಳರಿಂದ ವಶಪಡಿಸಿಕೊಂಡಿದ್ದ ಚಿನ್ನವನ್ನು ಕದ್ದ ಆರೋಪದ ಮೇಲೆ ಸೂರ್ಯನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್ ಮಹಾಜನ್ ಮತ್ತು ಅವರ ಕ್ರೈಂ ಸಿಬ್ಬಂದಿ ವಿರುದ್ಧ ಕೇಂದ್ರ ವಲಯ ಐಜಿಪಿ ಲಾಬೂರಾಮ್ಗೆ ಸಾಮಾಜಿಕ ಕಾರ್ಯಕರ್ತ, ವಕೀಲ ವೆಂಕಟಾಚಲಪತಿ ದೂರು ನೀಡಿದ್ದಾರೆ.

ಕಳೆದ ಐದು-ಆರು ತಿಂಗಳುಗಳಲ್ಲಿ ಆನೇಕಲ್ ತಾಲ್ಲೂಕಿನ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲಾ ಕೃತ್ಯಗಳನ್ನು ಒಂದೇ ತಂಡ ಎಸಗಿದೆ ಎಂದು ತಿಳಿದುಬಂದಿತ್ತು. ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಸಂಜೀವ್ ಮಹಾಜನ್ ಮತ್ತು ತಂಡ, ಕೇಸ್ಗೆ ಸಂಬಂಧಿಸಿದ ಮಾರ್ವಾಡಿಗಳನ್ನು ವಶಕ್ಕೆ ಪಡೆದು ಖಾಸಗಿ ಲಾಡ್ಜ್ವೊಂದರಲ್ಲಿ ಕೂಡಿಹಾಕಿ ಚಿನ್ನವನ್ನು ರಿಕವರಿ ಮಾಡಿದ್ದಾರೆ.

ಆದ್ರೆ, ಕಳ್ಳರಿಂದ ವಶಪಡಿಸಿಕೊಂಡಿದ್ದ ಚಿನ್ನದ ಪ್ರಮಾಣ ಮತ್ತು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಚಿನ್ನದ ಪ್ರಮಾಣದಲ್ಲಿ ದೊಡ್ಡ ವ್ಯತ್ಯಾಸವಿರುವ ಬಗ್ಗೆ ದೂರುದಾರ ವಕೀಲ ವೆಂಕಟಾಚಲಪತಿ ಅವರು ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ದೂರಿನಲ್ಲಿಯೂ ಉಲ್ಲೇಖಿಸಿದ್ದಾರೆ.

ಸುಮಾರು 2 ಕೆ.ಜಿ.ಯಷ್ಟು ಚಿನ್ನಾಭರಣಗಳನ್ನು ರಿಕವರಿ ಮಾಡಲಾಗಿದ್ದರೂ, ದಾಖಲೆಗಳಲ್ಲಿ ಕೇವಲ 200 ಗ್ರಾಂ ಚಿನ್ನ ಮಾತ್ರ ತೋರಿಸಲಾಗಿದೆ. ಉಳಿದ ಚಿನ್ನವನ್ನು ಇನ್ಸ್ಪೆಕ್ಟರ್ ಮತ್ತು ಕ್ರೈಂ ಸಿಬ್ಬಂದಿ ಪರಸ್ಪರ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಕಳ್ಳತನದ ಮಾಲು ಪಡೆದಿದ್ದ ಆರೋಪಿಗಳಿಂದ ಲಂಚದ ರೂಪದಲ್ಲಿ ಹಣವನ್ನೂ ಪಡೆದಿದ್ದಾರೆ ಎಂದು ದೂರಿನಲ್ಲಿ ವೆಂಕಟಾಚಲಪತಿ ವಿವರಿಸಿದ್ದಾರೆ.
ಈ ಘಟನೆಯಿಂದಾಗಿ ಚಿನ್ನಾಭರಣಗಳನ್ನು ಪಡೆಯಬೇಕಿದ್ದ ಸಂತ್ರಸ್ತರಿಗೆ ಭಾರೀ ಅನ್ಯಾಯವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವೆಂಕಟಾಚಲಪತಿ ದೂರಿನಲ್ಲಿ ಮನವಿ ಮಾಡಿದ್ದಾರೆ. ದೂರಿನ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ವಲಯ ಐಜಿಪಿ ಲಾಬೂರಾಮ್, ಈ ಪ್ರಕರಣವನ್ನು ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್ ಅವರಿಗೆ ವರ್ಗಾಯಿಸಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಸದ್ಯ ಪೊಲೀಸರು ಈ ಗಂಭೀರ ಆರೋಪದ ಕುರಿತು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಧರ್ಮಸ್ಥಳದ ವಸತಿ ಗೃಹಗಳಲ್ಲಿ ನಡೆದ 4 ‘ಅಸಹಜ ಸಾವುಗಳ’ ತನಿಖೆ ನಡೆಸಿ – SITಗೆ ಮಹೇಶ್ ಶೆಟ್ಟಿ ತಿಮರೋಡಿ ದೂರು!
ಇದನ್ನೂ ಓದಿ : ಕಳ್ಳರಿಂದ ರಿಕವರಿ ಮಾಡಿದ್ದ ಚಿನ್ನವನ್ನೇ ಕದ್ದ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್ ವಿರುದ್ದ ಐಜಿಪಿಗೆ ದೂರು!







