ಬೆಂಗಳೂರು : ದಯಮಾಡಿ ನನಗೆ ವಿಷ ಕೊಡಿ ಎಂದು ನಟ ದರ್ಶನ್ ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾಗಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಸೇರಿ ಇನ್ನಿತರ ಆರೋಪಿಗಳನ್ನು ರಾಜ್ಯದ ಇತರೆ ಕಾರಾಗೃಹಗಳಿಗೆ ವರ್ಗಾವಣೆ ಮಾಡುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ ಹಾಗೂ ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ನೀಡುವಂತೆ ದರ್ಶನ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿ ವಿಚಾರಣೆ ಇಂದು ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದೆ.
ಈ ವಿಚಾರಣೆ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಪ್ಪನ ಅಗ್ರಹಾರದಿಂದ ಹಾಜರಾದ ದರ್ಶನ್, ನನಗೆ ದಯಮಾಡಿ ವಿಷ ಕೊಡಿ. ಬಿಸಿಲು ನೋಡಿ ಬಹಳ ದಿನವಾಗಿದೆ. ಬಟ್ಟೆಗಳು ವಾಸನೆ ಬರುತ್ತಿವೆ. ಫಂಗಸ್ನಿಂದಾಗಿ ಇಲ್ಲಿ ಬದುಕಲು ಆಗುತ್ತಿಲ್ಲ. ದಯಮಾಡಿ ನನಗೆ ವಿಷ ನೀಡುವಂತೆ ಆದೇಶಿಸಿ ಎಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಮನವಿಗೆ ಜಡ್ಜ್ ಹಾಗೆಲ್ಲ ಆದೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ವಿಷ ಕೊಡಿ ಎಂದು ದರ್ಶನ್ ಮೂರು ಬಾರಿ ಬೇಡಿಕೊಂಡರೆ ಫಂಗಸ್ ಆಗಿದೆ ಎಂದು ಹಲವು ಬಾರಿ ಅಳಲು ತೋಡಿಕೊಂಡಿದ್ದಾರೆ. ದೈವ ಭಕ್ತರಾಗಿರುವ ದರ್ಶನ್ ಇಂದು ಹಣೆಗೆ ಕುಂಕುಮ ಹಚ್ಚಿಕೊಂಡು ವಿಚಾರಣೆಗೆ ಹಾಜರಾಗಿದ್ದು ವಿಶೇಷವಾಗಿತ್ತು.
ಪ್ರಾಸಿಕ್ಯೂಷನ್ ಮತ್ತು ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ನೀಡುವಂತೆ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕೋರ್ಟ್ ಇಂದು ಮಧ್ಯಾಹ್ನ 3 ಗಂಟೆಗೆ ತೀರ್ಪು ಪ್ರಕಟಿಸುವುದಾಗಿ ಹೇಳಿದೆ.
ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ? ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುವ ವಿಚಾರವು ಇಂದು ನಿರ್ಧಾರವಾಗಲಿದೆ. ಬಳ್ಳಾರಿ ಜೈಲಿಗೆ ದರ್ಶನ್ ಅವರನ್ನು ಶಿಫ್ಟ್ ಮಾಡುವಂತೆ ಜೈಲು ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ಆದೇಶವನ್ನು ಕೋರ್ಟ್ ಕಾಯ್ದಿರಿಸಿತ್ತು. ಕೋರ್ಟ್ನಿಂದ ಇಂದು ಆದೇಶ ಹೊರಬೀಳಲಿದೆ. ದರ್ಶನ್ ಸೇರಿ ಐವರು ಆರೋಪಿಗಳ ಶಿಫ್ಟ್ಗೆ ಅರ್ಜಿ ಮಾಡಲಾಗಿತ್ತು. ದರ್ಶನ್, ಲಕ್ಷ್ಮಣ್, ನಾಗರಾಜ್, ಜಗದೀಶ್ ಹಾಗೂ ಪ್ರದೋಷ್ ಶಿಫ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ಇದನ್ನೂ ಓದಿ : ಉಗ್ರ ಪ್ರತಿಭಟನೆಗೆ ಮಣಿದ ನೇಪಾಳ ಸರ್ಕಾರ – ಸಾಮಾಜಿಕ ಜಾಲತಾಣ ನಿಷೇಧ ವಾಪಸ್!







